ಸಿದ್ದಾಪುರ: ದೇಶದ ಅತಿಚಿಕ್ಕ ತಾಲೂಕುಗಳಲ್ಲೊಂದಾಗಿ ಪರದಾಸ್ಯದಿಂದ ದೇಶವನ್ನು ಮುಕ್ತಿಗೊಳಿಸಲು ಅತಿ ಹೆಚ್ಚು ಸ್ವಾತಂತ್ರ್ಯ ಯೋಧರನ್ನು ನೀಡಿರುವ ಹೆಚ್ಚುಗಾರಿಕೆ ಸಿದ್ದಾಪುರ ತಾಲೂಕಿಗಿದೆ. ಇಲ್ಲಿಯ ಜನತೆಗೆ ದೇಶಾಭಿಮಾನದ ಪಾಠ ಮಾಡಬೇಕಾದ ಅವಶ್ಯಕತೆ ಕಂಡುಬರುವುದಿಲ್ಲ ಎಂದು ಶಿರಳಗಿಯ ಶ್ರೀ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಶ್ರೀಗಳು ಹೇಳಿದರು.
ಇಲ್ಲಿಯ ಶಂಕರಮಠದಲ್ಲಿ ಕೊಡಗಿನ ರಂಗಭೂಮಿ ಟ್ರಸ್ಟ ಪ್ರಸ್ತುತಪಡಿಸಿದ ಅಡ್ಡಂಡ ಕಾರ್ಯಪ್ಪ ರಚನೆಯ “ಸತ್ಯವನ್ನೇ ಹೇಳುತ್ತೇನೆ” ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಾಟಕದ ವೀಕ್ಷಣೆಗೆ ಸೇರಿರುವ ಪ್ರೇಕ್ಷಕ ಸಮೂಹವನ್ನು ಕಂಡರೆ ಇಲ್ಲಿಯ ಜನತೆಗೆ ಇರುವ ದೇಶಪ್ರೇಮದ ಅರಿವಾಗುತ್ತದೆ. ಪ್ರಸ್ತುತ ಪ್ರದರ್ಶಿಸಲ್ಪಡುತ್ತಿರುವ ನಾಟಕದ ರಚನಾಕಾರ ಅಡ್ಡಂಡ ಕಾರ್ಯಪ್ಪ ಎಡಚರ ಚಿಂತನೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ಕೆಚ್ಚೆದೆ ಹೊಂದಿದ್ದಾರೆ. ಈಗಾಗಲೆ ಐತಿಹಾಸಿಕ ಘಟನೆಗಳ, ವ್ಯಕ್ತಿಗಳ ಜೀವನದ ಕುರಿತು ಮರೆಮಾಚಿರುವ ಚರಿತ್ರೆಯ ಸತ್ಯವನ್ನು ಸಂಶೋಧಿಸಿ ಬಹಿರಂಗಪಡಿಸಿದ್ದಾರೆ. ಇಂತಹ ಕಾರ್ಯಗಳ ಮೂಲಕ ಭವಿಷ್ಯದ ಕುಡಿಗಳಲ್ಲಿ ದೇಶಪ್ರೇಮದ ಬೀಜಬಿತ್ತಬೇಕಾಗಿದೆ ಎಂದು ಅವರು ಹೇಳಿದರು.
ಆರ್ಎಸ್ಎಸ್ನ ಪ್ರಮುಖ ಜಗದೀಶ ಜೀ ಅವರು ಮಾತನಾಡಿ ಇದು ರಾಷ್ಟ್ರೀಯ ಜಾಗರಣದ ಕಾರ್ಯಕ್ರಮ. ಇದು ಮನರಂಜನೆಯ ನಾಟಕವಾಗಿರದೆ ಶಿಕ್ಷಣದ ಕಮ್ಮಟವಾಗಿದೆ ಎಂದರು. ಬಿಜೆಪಿ ತಾಲೂಕಾ ಅಧ್ಯಕ್ಷ ಎಂ.ಕೆ.ತಿಮ್ಮಪ್ಪ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಆರ್.ಎನ್.ಹಳಕಾರ ಉಪಸ್ಥಿತರಿದ್ದರು. ವಿಶ್ವಹಿಂದೂ ಪರಿಷತ್ತಿನ ಗಂಗಾಧರಜಿ, ಅರುಣಕುಮಾರಜಿ, ಶ್ರೀನಿವಾಸಜಿ, ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ, ರಂಗಸೌಗಂಧದ ಗಣಪತಿ ಹುಲಿಮನೆ, ಒಡ್ಡೋಲಗದ ಗಣಪತಿ ಹಿತ್ಲಕೈ, ರಂಗಕರ್ಮಿ ರಮಾನಂದ ಐನಕೈ, ಬಿಜೆಪಿ ಪ್ರಮುಖ ಗುರುರಾಜ ಶಾನಭಾಗ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.ಶ್ರೀಮತಿ ಉಷಾ ಐನಕೈ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜಕ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟನ ಅನಂತಮೂರ್ತಿ ಹೆಗಡೆ ಸ್ವಾಗತಿಸಿದರು. ನಾಟಕ ರಚನಾಕಾರ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕ ಮಾತನಾಡಿದರು. ಮೂರು ತಾಸುಗಳ ಕಾಲ ನಡೆದ ನಾಟಕ ಪ್ರದರ್ಶನ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಯಿತು.